ಛೀ … ಅರ್ಧ ತಿಂದ ಕನಸು ಹಾಗೆ ಇವೆ … ಆಗ್ಲೇ ಎಚ್ಚರ ಆಗೋಯ್ತು......
ಮತ್ತೆ ಅದೇ ಮುಂಜಾನೆ…
ಪುನಃ ಅದೇ ಗೋಳು….ಆಫೀಸ್ಗೆ ಹೋಗಲೇ ಬೇಕು …. ಬಸ್ ಸ್ಟಾಪ್ ಲಿ ಕಾಯ್ತಾ ….. ನವರಿಗೆ ಹಿಡಿ ಶಾಪ ಹಾಕ್ತಾ ….. ತುಂಬು ಗರ್ಭಿಣಿ ತರ ಬರೋ ಆ ೩೩೩ ಬಸ್ ನಲ್ಲೆ ಹೇಗೋ ನೇತಾಡ್ತಾ
ಬಂದು ಆಫೀಸ್ ಸೇರ ಬೇಕು…. ಎಲ್ಲರನ್ನು ಬೈಯೋಕೆ ಅಂತ ಬರೋ ಆ ಬೊಕ್ಕತಲೆ ಬಾಸ್ ಮುಂದೆ ನಿಂತುಕೋ ಬೇಕು ಹಲ್ಕಿರೀತಾ ….. ಒಹ್…. ಪೇಪರ್ ನವನಾ....…. ಇವತ್ ಏನ್ ಸುದ್ದಿ ಇರುತ್ತೋ ….
ಹೈ ….ಏನಾಶ್ಚರ್ಯ…… ನನ್ ಫೋಟೋ….ಪೇಪರ್ ನಲ್ಲಿ…… .ಛೇ … ಏನಾಗಿದೆ ಈ ಪತ್ರಿಕೆ ಎಡಿಟರ್ ಗೆ ? ನನ್ ಫೋಟೋ ಏತಕ್ಕೆಶ್ರದ್ದಾಂಜಲಿ ಕಾಲಮಿನಡಿ ಹಾಕಿದಾರೆ ? …. ಹಾಳಾದ್ ಎಡಿಟರ್ ತನ್ನ ಮೊಬೈಲ್ ನಂಬರ್ ನೂ
ಹಾಕಿಲ್ಲ….ಏನ್ ಅವಗಡನೋ ಏನೋ ! ಹೇಯ್ ಸ್ವಲ್ಪತಡಿ….ನೆನಪು ಮಾಡಿಕೊಳ್ತಿನಿ ….. ರಾತ್ರಿ ಊಟ ಮಾಡಿ ಮಲಗೋಕೆ ಹೋಗುವಾಗಲೇ ಸ್ವಲ್ಪ ಎದೆ ನೋವು ಇತ್ತು…. ಅವಳ್ಗೆ ಹೇಳುದ್ರೆ ಗಾಬರಿ ಆಗಿ… ಎಲ್ಲಿ ಮಕ್ಕಳಿಗೂ ಹೇಳಿ ಅವರ ನಿದ್ರೆ ನು ಹಾಳ್
ಮಾಡ್ತಾಳೆ ಅನ್ಕೊಂಡು ಬಂದು ಮಲಗಿದೆ …. ಹಾಗೆ ಪಕ್ಕಕೆ ಹೊರಳಿ ನೋಡುದ್ರೆ ಯಾಕೋ ಇವಳು ತುಂಬ ಲಕ್ಷಣವಾಗಿ ಕಾಣುತಿದ್ದಾಳೆ ಈ 12 ವರ್ಷದಲಿ ಯಾವತ್ತೂ… ಇಲ್ದಂತೆ… ಛೀ ಹಾಳು ಮರ್ಕಟ ಬುದ್ದಿ… ಎದೆ ನೋವು ಅನಿಸ್ತಿದ್ರು ಚಪಲ ಬಿಡಲ್ಲ ಅನಿಸುತೆ..
ಹೌದು… ನೋವು ಜಾಸ್ತಿ ಆಗಿತ್ತು … ಬಿಸಿ ನೀರು ಕುಡಿಬೇಕನ್ಸ್ತು…. ಒಳ್ಳೆ ನಿದ್ರೆಲಿ ಇದಾಳೆ ಇವಳನ ಎಬ್ಬಿಸೋದು ಬೇಡ…. ಹಾಗೆ ಸರಿ ಹೋಗಬಹುದು…. ಹೆದರೋಕೆ ಇದೇನ್ ಇವತ್ತು ನೆನ್ನೆ ನೋವೆ ? …. ಹಾಗೆ ಮತ್ತೆ ಹೊರಳಿ ಮಲಗಿದೆ…. ಅಷ್ಟೇ ನೆನಪಿರೋದು…. ಕಣ್ತುಂಬ ಒಳ್ಳೆ ನಿದ್ರೆ ಬಂತು ಅನ್ನಿಸ್ತು…
ಒಹ್… ಯೋಚನೆ ಮಾಡ್ತಾ ಮಾಡ್ತಾ ಸಮಯ ಹೋಗೋದೇ ಗೊತಾಗ್ಲಿಲ್ಲ…. ಹೇಯ್ … ಏನಿದು ಮನೆ ಪಕ್ಕದ್ ಸ್ಕೂಲ್ ಬೆಲ್ ಆಗ್ತಿದೆ ?…. ಒಹ್…. 9 ಘಂಟೆ ಆಗೋಯ್ತ ?…. ಲೇಟ್ ಆಗಿ ಎದ್ದುದಕ್ಕೆ ಅವಳು ಕೆಕ್ಕರಿಸಕೊಂಡು ನೋಡ್ತಾ… ಕಾಫೀ ತಂದು
ದುತ್ತಂತ ಇಟ್ಟು ಹೋಗ್ಬೇಕಿತ್ತಲ್ಲ…. ಏನಾಗಿದೆ ಇವಳಿಗೆ…? ಈವತ್ತೂ ಯಾಥಾ ಪ್ರಕಾರ ಆಫೀಸ್ ಗೆ ಲೇಟ್ ! ಏರ್ ಪೋರ್ಟ್ ಶಿಫ್ಟ್ ಆಗೋಯ್ತು… ಈಗೆಲ್ಲ …. ಹಳೆ ಏರ್ ಪೋರ್ಟ್ ರೋಡ್ ನಲಿ ಟ್ರಾಫಿಕ್ ಇಲ್ಲ ಅಂತ ಎಲ್ಲರೂ ಹೇಳ್ತಾರೆ…. ಈ ಟೈಮಲಿ ಆ ರೋಡ್ ನಲಿ
ಬಂದು ನೋಡಲಿ…ದೊಮ್ಮಲೂರ್ ಪ್ಹ್ಲ್ಯ್ ಓವರ್ ಇಂದ HAL ಟೌನ್ ಸಿಗ್ನಲ್ ದಾಟಿ ಹೊಗೊದುಕ್ಕೆ ಕಡಿಮೆ ಅಂದ್ರು ೨೦ ನಿಮಿಷ ಬೇಕು… ಅದೂ ಆ ಬಸ್ ಕಂಬಿಗೆ ಜೋತು ಹಾಕಿ ಕೊಂಡೆ ನಿಂತು ಮುಂದೆಸಾಗಬೇಕು… ಈವತ್ತೂ ತರ್ಲೆ ಬಾಸ್ ಗೆ ಮತ್ತೊಂದು ಚಾನ್ಸ್ ನನ್ನ ಎಲ್ಲಾರ್ ಮುಂದೆ ಬೈಯೋಕೆ…
ಸರೀ… ಏನು ಮನೆ ಇಷ್ಟೊಂದು ಸೈಲೆಂಟ್ ಆಗಿದೆ…? ಎಲ್ ಹೋದರು ಎಲ್ರು ? … ಏನದು ಮನೆ ಮುಂದೆ ಅಷ್ಟೊಂದು ಜನ ಸೇರಿದ್ದಾರೆ … ಯಾರ ಮುಖದಲ್ಲೂ ನಗುನೇ ಇಲ್ಲಾ !.... ಕೆಲವರು ಎನುಕ್ಕೋ ಜೋರಾಗಿ ಅಳುತ್ತಾ ಇದಾರೆ… ? ಕಟ್ಟಿಗೆ ಯಾಕೆ ಉರಿ ಹಾಕಿದಾರೆ ?
ಅಯ್ಯೋ…. ಏನಿದು…. ನಾನ್ ಇಲ್ಲಿ ನೆಲದ ಮೇಲೆ ಹೇಗೆ ಮಲಗಿದೀನಿ….. ?
ಹೇಯ್ ನಾನ್ ಇಲ್ಲಿದೀನಿ ಕಣ್ರಪ್ಪ…. ಎಷ್ಟು ಜೋರಾಗಿ ಕೂಗಿ ಕೊಂಡರೂ ಯಾರು ಕೇಳಿಸಿ ಕೊಳ್ತಾನೆ ಇಲ್ಲಾ… ಹೇಯ್ ಪ್ಲೀಸ್… ನೋಡಿ ಇಲ್ಲಿ …….ನನ್ ಸತ್ತಿಲ್ಲ….ಅಳೋದು ನಿಲ್ಲಿಸಿ ಇತ್ತಕಡೆ ನೋಡಿ...ಛೆ… ಯಾರು ನನ್ ಕಡೆ ನೋಡ್ತಾನೆ ಇಲ್ಲಾ…. ನನ್ ರೂಂ ಒಳಗಾದರು ಹೋಗ್ತಿನೀ... ಹೌದೂ … ನಾನ್ ಸತ್ತಿದಿನಾ ? …. ನನ್ನೇ ನಾನ್ ಕೇಳಿಕೊಳ್ತಾ ಇದ್ದೀನಿ ….
ಅದ್ಸರಿ… ಅವಳೆಲ್ಲಿ… ? ಮಕ್ಕಳೆಲ್ಲಿ ? ಅಮ್ಮ … ಅಪ್ಪ…. ಯಾರೂ ಅಲ್ಲಿಲ್ಲ… !
ಒಹ್ ಈ ರೂಂ ನಲ್ಲಿ ಇದಾರಾ ? ಎಲ್ರು ಅಳ್ತಾ ಇದಾರೆ, ಒಬ್ಬರನ್ನೊಬ್ಬರು ಸಮಾಧಾನ ಮಾಡೋಕೆ ಪ್ರಯತ್ನ ಮಾಡ್ತಿದಾರೆ…. ಸತ್ತಿದಿನಿ ಅಂದ್ಕೊಂಡು ಇವರೆಲ್ಲ ಅಳುತೀರೋದಾ? ಆ ದು:ಖ … ನನ್ನೆಡೆಗಿನ ಅವರ ಪ್ರೀತಿಯ ಆಳ ಅರಿಯೋ ಭಾಗ್ಯ ಎಲ್ಲರಿಗು
ಸಿಗಲ್ವೇನೋ….!
ಅವಳನ್ನೇ ನೋಡು… ಅಳ್ತಾನೆ ಇದಾಳೆ… ಆ ಕಂಗಳಲಿ ಒಂದು ನಿರ್ಲಿಪ್ತತೆ, ದು:ಖದ ತೀವ್ರತೆ … ಮತ್ತೆ ಯಾರಲ್ಲೂ ಬರಲ್ಲವೇನೋ … ಮಕ್ಕಳ ಮುಖ ನೋಡಿ… ಧಾರಕಾರವಾದ ಕಣ್ಣೀರು….ಏನು ನಡೆದಿದೆ ಅನ್ನೋ ಪರಿವೇನೆ ಇಲ್ವೇನೋ ಅನ್ನೋಸ್ತು ಆಳದ ನೋವು … ಅಮ್ಮಅತ್ತಾಗ ತಂತಾನೆ ಇಳಿದು ಬರೋ ಕಣ್ಣೀರು… ಪಾಪ … ಅವುಕ್ಕೂ ಗೊತ್ತಿಲ್ಲ ನಾನ್ ಇಲ್ಲಿ ಇರೋದು…!
ಹೇಯ್ ಪುಟ್ಟೂ… ನೀನಂದ್ರೆ ನನ್ ಉಸಿರು ಅಂತ ನಿಂಗೆ ತಿಳಿಸದೇ ನಾನ್ ಹೇಗೆ ಹೋಗ್ಲಿ ?
ಲೇಯ್… ನಿಜಕ್ಕೂ ನೀನಿಷ್ಟು ಸುಂದರವಾಗಿದೀಯ … ನನ್ನ ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸ್ತೀಯ ಅಂತ ನಂಗೆ ಗೊತ್ತು, ಪ್ರಪಂಚದಲ್ಲೇ ನಿನ್ ಬಿಟ್ರೆ ನನ್ ಯಾರೇ ಪ್ರೀತಿಯಿಂದ ನೋಡ್ಕೊಂಡಿದಾರೆ ?
ಅಮ್ಮ… ನೀವೇ ಹೇಳಿ …. ನೀನು & ಅಪ್ಪ…ಇಲ್ದೆ ನಾನ್ ಹೇಗೆ ?
ತಪ್ಪು ಮಾಡಿದಾಗಲ್ಲೆಲ್ಲ ನಂಗೆ ತಿಳಿ ಹೇಳಿ ತೀಡಿ ತಿದ್ದಿದ, ನನ್ ಕಷ್ಟದ ಘಳಿಗೇಲಿ ಹೇಳದೇನೆ ಬಂದು ಆದುಕೊಂಡ ನನ್ನ ಇಷ್ಟು ಆತ್ಮೀಯ ಗೆಳೆಯರಿಗೆ ಧನ್ಯವಾದ ಹೇಳದೆ, ಅವರ ಕಷ್ಟ ಸುಖಗಳಿಗೆ ಸ್ಪಂದಿಸಲಾಗದ ಕ್ಷಣಗಳಿ ಕ್ಷಮೆಯಾಚಿಸದೆ ಹೇಗೆ ಸಾವನ್ನಪ್ಪಿ ಕೊಳ್ಳಲಿ.. ?
ಅಲ್ನೋಡಿ… ಅವ್ನು… ಆ ಮೂಲೇಲಿ ಒಂಟಿಯಾಗಿ ಮರೇಲಿ ನಿಂತು ತೇವಗೊಂಡ ತನ್ನ ಕಣ್ಣೀರ ವರೆಸಿಕೊಳ್ತಾ ಇದಾನೆ ...
ಹೇಯ್ ಅವನು… ರವಿ … ನನ್ ಬಾಲ್ಯ ಸ್ನೇಹಿತ… ಸ್ಕೂಲಲ್ಲಿ ಮೇಷ್ಟ್ರು ನನ್ನ ಕೈಮೇಲೆ ಬಾಸುಂಡೆ ಬರೋ ತರಾ ಹೊಡೆದರು ಅಂತ ಅವರ ಕೈ ಕಚ್ಚಿ ಮನೆಗೆ ಓಡೋಡ… ದೇಹ ಎರಡು ಪ್ರಾಣ ಒಂದು ಅನ್ನೋ ತರಾನೆ ಬೆಳೆದ್ವಿ… ಏನೋ ಕೆಟ್ಟ ಘಳಿಗೆ ಇತ್ತೀಚಿನ ವರ್ಷದಲಿ ಒಂದು ಸಣ್ಣ ವಿರಸ ನಮ್ಮನ್ನ ದೂರ ಮಾಡ್ಬಿಡ್ತು… ನಮ್ಮಲ್ಲಿ ಇದ್ದ ಹಮ್ಮು ಮತ್ತೆ ನಮ್ಮನ್ನ ಒಟ್ಟಿಗೆ ಸೇರೋಕೆ ಬಿಡಲೇ ಇಲ್ಲಾ…
ಅವನ್ನ ನೋಡುತಿದ್ರೆ ಈಗಲೂ ಹತ್ತಿರ ಹೋಗಿ ಅಪ್ಪಿಕೊಂಡೂ " ಮಿತ್ರಾ ಇಷ್ಟು ದಿನ ನಡೆದುದಕ್ಕೆಲ್ಲ ನಾನೇ ಕ್ಷಮೆ ಕೇಳ್ತಿದೀನಿ… ಈಗಲೂ ನೀನು ನನ್ನ ಆಪ್ತ ಮಿತ್ರಾ ನೆ… ಅಂತ ಹೇಳಲಾ ?
ಬೇಡ… ಅವನೇನು ಮಹಾ ಒಂದು ದಿನಾನು ಕಣ್ಣೆತ್ತಿ ನನ್ನ ಕಡೆ ತಿರುಗೀ ನೋಡಲೇ ಇಲ್ಲಾ…. ಈಗ ಹೋಗ್ಬೇಕ? ಹೌದು ತಾನೆ? ಹೇಯ್ ಅವನು ಸ್ವಲ್ಪ ಒರಟ ನಾನೇ ಹೋಗಿ ಕೈ
ಕುಳುಕುತೀನಿ ಬಿಡಿ ....
ಏನಿದು ಅವನ ಎದುರಿಗೆ ನಿಂತರು ….. ಅವನ ಮುಖದಲಿ ಏನೇನು ಸ್ಪಂದನೆ ನೆ ಇಲ್ಲಾ… ಕೈ ಚಾಚಿದರು … ಆ ಕಡೆ ಎಲ್ಲೋ ನೋಡ್ತಾನೆ !….
ಅಯ್ಯೋ ದೇವರೇ… ನಿಜವಾಗಲು ನನ್ನ ಬದುಕು ಮುಗಿಸೆ ಬಿಟ್ಯ… ಅಂದ್ರೆ ಇಲ್ಲಿ ಮಲಗಿಸಿರೋ ದೇಹ ನನ್ನದೆನಾ … ? ಆತ್ಮ ಬೇರೆ ಆಯ್ತು ಅನ್ನೋದು ಹೀಗೆನಾ...
ದೇವರೇ.... ನಂಗೆ ಈಗ ಒಂದೇ ಒಂದು ಅವಕಾಶ ಕೊಡು.... ದಯವಿಟ್ಟು ಕೊಡು....
ನನ್ನ ಮಕ್ಕಳ ಪ್ರೀತಿಯ ಅಪ್ಪುಗೆಯಲ್ಲಿ ಬೆರೆತು ಹೋಗೋಕೆ, ಬದುಕಿನುದ್ದಕ್ಕೂ ಕಷ್ಟದಲ್ಲೇ ಸಾಕಿ ನನ್ನ ಈ ಎತ್ತರಕೆ ಬೆಳಸಿದ ಅಮ್ಮನ್ನ ಒಂದು ಕ್ಷಣ ನಗಿಸೋಕೆ... ನನ್ನಿಂದ ಮುಟಿಗೆಯಷ್ಟು ಸ್ನೇಹ ವಿಶ್ವಾಸ ಅಷ್ಟನ್ನೇ ಸದಾ ಎದುರುನೋಡುತಿದ್ದ, ನಾನಿಲ್ಲದ ನನ್ನ ಮನೇಲಿ
ದು:ಖ ನುಂಗಿ ಮುಂದಿನ ಕೆಲಸಗಳಿಗೆ ನೆರವಗ್ತಿರೋ ನನ್ನ ಮಿತ್ರರಿಗೆ ಒಂದು ಧನ್ಯವಾದ ಹೇಳೋಕೆ .....
ಭಗವಂತಾ ಬದುಕ ಬಯಸಿ ಬೊಗಸೆ ಒಡ್ಡಿ ನಿಂತಿರುವೆ ... ಕೆಲವೇ ಕ್ಷಣಗಳವರೆಗಾದರು ಅವಕಾಶ ಕೊಡೊ ತಂದೆ....
ಬಾನ ದಿಟ್ಟಿಸಿ ಮತ್ತೆ ಮೇಲ್ದನಿಯಲ್ಲಿ ಕೇಳುತಿರುವೆ...
“ ಭಗವಂತಾ ಒಂದೇ ಒಂದು ಅವಕಾಶ ಕೋಡೋ....................."
ಯಾರೋ ಭುಜ ಹಿಡಿದು ಅಳುಗಿಸಿದಂಥಾಯ್ತು…. ಕಣ್ಣು ಬಿಟ್ರೆ ಮೇಲೆ ಚಾವಣಿಯಲ್ಲಿ ಸುತುತಿರುವ ಪಂಕ.. ಪಕ್ಕದಲಿ ಸ್ವಲ್ಪ ಆತಂಕ ಗೊಂಡಂತೆ ಕಾಣುತಿರೋ ನನ್ನವಳು !
“ ಏನ್ರೀ ಎನಾನ ಕೆಟ್ಟ ಕನಸು ಬಿತ್ತಾ ?” ಅನ್ನೋ ಪ್ರಶ್ನೆ ಯೊಂದಿಗೆ….
ಅಂದ್ರೆ… ನಾನು ಇನ್ನು ಮಲಗಿ ನಿದ್ರೆಲೆ ಇದ್ನಾ !… ಈಗ ಕಂಡಿದ್ದು ಒಂದು ಕನಸೇನಾ ?....
“ ಹೌದು ಕಣೆ ... ಏನೋ ಕನಸು... ಸ್ವಲ್ಪ ನೀರು ಕೊಡು...” ಹೇಳಿದ್ದು ಅವಳಿಗೂ ಕೇಳಿಸಿದೆ ನೀರೂ ತಂದು ಕೊಟ್ಟಳು. ಕುಡಿದು ಲೋಟ ಪಕ್ಕಕ್ಕೆ ಇಟ್ಟು ಅವಳ ಕಿವೀಲಿ ಉಸುರಿದೆ… “ ನನ್ ಬದುಕಿನುದ್ದಕ್ಕೂ ಪ್ರೀತಿಯನ್ನು ಮೊಗೆ ಮೊಗೆದು ಬೊಗಸೆ ಗಳಿಗಿಡುತಾ ಬಂದ ನೀನು ನಿಜಕ್ಕೂ ಕರುಣಾಮಯಿ ತಾಯಂತವಳು ವಾತ್ಸಲ್ಯ ಮಾಯಿ… ನನ್ನ ಅಂತರಾಳದ ರೂಪಸಿ ಕಣೆ , ನನ್ ಕೊನೆ ತನಕ ನನ್ ಕೈ ಬಿಡಬೇಡ Please do not let me down till my end. ನೀಲಿ...“
ಯಾಕೋ ಅವಳ ಕಣ್ಣಲ್ಲಿ ನೀರು ಮುಖದಲ್ಲಿ ಹುಸಿ ನಗು ಎರಡು ಒಟ್ಟಿಗೆ ಮಿನುಗಿದವು… ಮತ್ತೆ ಈ ಕಡೆ ಹೊರಳಿ ಮಲಗಿ… “ ಭಗವಂತ … ಬಂದಿದ್ದು ಒಂದು ಕನಸೇ ಆದರು… ಅದು ನನ್ನ ಮರು ಜನ್ಮ…. ವ್ಯಥೆಗಳ ಕಳೆಯುವ ಕಥೆ ಗಾರ... ನಿನ್ನ ಕಲೆ ಗೆ ಯಾವುದು
ಭಾರ ? " ಅಂದುಕೊಳ್ತಾ ಮತ್ತೆ ನಿದ್ರೆಗೆ ಜಾರಿದೆ....
ಈಗಲೂ ಕಾಲ ಮಿಂಚಿಲ್ಲ ... ನೀವೂ ನಿಮ್ಮ ಹಮ್ಮು ಗಳನ್ನ ಬಿಡಿ... ನೀವು ನಿಮ್ಮ ಮನೆಯವರ ಮೇಲೆ, ಆತ್ಮೀಯರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ವ್ಯಕ್ತ ಪಡಿಸಿ ಪ್ಲೀಸ್..
No comments:
Post a Comment